Sunday 19 November 2017

15/10/2017 ರ ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ನನ್ನ ಲೇಖನ "ಕ್ಯಾಂಟೀನ್ ನಲ್ಲಿ ಜ್ಞಾನೋದಯ"


ಮೊನ್ನೆ ಒಂದು ದಿನ ಕೆಲಸದ ಒತ್ತಡ ಜಾಸ್ತಿಯಾಗಿ ತಲೆನೋವು ಬಂದಿತ್ತು ಹೀಗೆ ತಲೆನೋವಾದಾಗಲೆಲ್ಲಾ ಶುಂಠಿ ಕಾಫಿ ಕುಡಿಯೋ ಅಭ್ಯಾಸ ನನಗೆ. ಕಾಫಿ ಕುಡಿಯೋಣ ಎಂದು ಕ್ಯಾಂಟೀನ್ ಕಡೆ ಕಾಲೆಳೆದೆ ಅಷ್ಟು ದೊಡ್ಡ ಕ್ಯಾಂಟೀನ್ ನಲ್ಲಿ ಒಬ್ಬಳೇ ಹುಡುಗಿ ಕೂತು ಕಾಫಿ ಹೀರುತ್ತಾ ಏನನ್ನೋ ಬರೆಯುತ್ತಿರುವುದನ್ನು ಗಮನಿಸಿದೆ, ಯಾರಪ್ಪಾ ಇದು ಬ್ರೇಕ್ ತೆಗೆದುಕೊಳ್ಳುವ ಸಮಯದಲ್ಲೂ ಬರೆಯುತ್ತಿದ್ದಾಳೆ ಈ ಹುಡುಗಿ ಅಂದುಕೊಂಡು ಕಾಫಿ ಕೌಂಟರಿಗೆ ಹೋಗಿ ಕಾಫಿ ತೆಗೆದುಕೊಂಡು ಅವಳೇನು ಬರೆಯುತ್ತಿರಬಹುದು ನೋಡೇ ಬಿಡುವ ಎನ್ನುವ ಕುತೂಹಲಕ್ಕೆ ಅವಳೆಡೆಗೆ ಹೆಜ್ಜೆ ಹಾಕುತ್ತಿರುವಾಗ ಗೊತ್ತಾಯಿತು ಅವಳು ಗೋಪಿಕ ಎಂದು. ನನ್ನ ಆಫೀಸ್ ನಲ್ಲಿರುವ ನನ್ನ ಸ್ನೇಹಿತೆಯರ ಗುಂಪಿನಲ್ಲಿ ಗೋಪಿಕ ಕೂಡ ಒಬ್ಬಳಾದ್ದರಿಂದ ತುಸು ಸಲುಗೆಯಿಂದಲೇ ಕಾಫಿಯನ್ನು ಟೇಬಲ್ ಮೇಲಿರಿಸಿ ಅವಳ ಮುಂದಿನ ಛೇರ್ ಎಳೆದು ಕೂತೆ. ಕಾಫಿ ಹೀರುತ್ತಾ ಏನೇ ಗೋಪಿಕ ಬ್ರೇಕ್ ಟೈಮಲ್ಲೂ ಬರಿತಾ ಇದಿಯಾ ಅದು ಇಷ್ಟು ದೊಡ್ಡ ನೋಟ್ ಬುಕ್ ನಲ್ಲಿ ಎಂದು ತಮಾಷೆಯಾಗಿ ಕೇಳಿದೆ ಅದಕ್ಕವಳು ಎಂಬಿಎ ಮಾಡುತ್ತಿದ್ದೇನೆ ಕಣೇ ವೀಕ್ ಎಂಡ್ ಕ್ಲಾಸ್ ಗಳು ಇರುತ್ತವೆ, ಸ್ವಲ್ಪ ಅಸೈನ್ ಮೆಂಟ್ ಬಾಕಿ ಇತ್ತು ಬರಿತಾ ಇದಿನಿ ಆಂದಳು. ಡಿಗ್ರಿ ಮಾಡಿದಿಯ ಕೈಯಲ್ಲಿ ಒಂದು ಒಳ್ಳೆಯ ಕೆಲಸ ಬೇರೆ ಇದೆ ಇವಾಗ ಓದೋದೆಲ್ಲಾ ಬೇಕಿತ್ತಾ ಎಂದು ಕೇಳಿದ್ದಕ್ಕೆ ಅವಳು ಅಯ್ಯೋ ನಾನು ಮಾಡಿರೋ ಬ್ಯಾಚುಲರ್ ಡಿಗ್ರಿ ನೋಡಿ ಮುಂದೆ ನನ್ನ ಮಕ್ಕಳು ಆಡಿಕೊಳ್ಳಬಾರದು ಅದಕ್ಕೆ ಮುಂದೆ ಓದುತ್ತಿದ್ದೇನೆ ಎಂದು ತಮಾಷೆ ಮಾಡಿದಳು. ಸ್ವಲ್ಪ ಹೊತ್ತು ಮೌನವಹಿಸಿ ಮತ್ತೊಂದು ಸಿಪ್ ಕಾಫಿ ಕುಡಿದು ತನ್ನ ಮನದಾಳವನ್ನು ಬಿಚ್ಚಿಡಲು ಶುರು ಮಾಡಿದಳು.
ಈ ಟೈಮ್ ಅನ್ನೋದು ಉರುಳುತ್ತಾ ಇರುತ್ತದೆ ನೋಡುನೋಡುತ್ತಾ ವರ್ಷಗಳೇ ಕಳೆದು ಹೋಗುತ್ತವೆ, ನಾವು ಸುಮ್ಮನೆ ಒಂದು ದಿನ ಕಳೆಯುವುದು ನಮ್ಮಲ್ಲಿ ಇರುವ ಒಂದು ಕಾಯಿನ್ ದುಡ್ಡನ್ನ ನದಿಗೆ ಹಾಕುವುದು ಎರಡೂ ಒಂದೇ, ಕಳೆದು ಹೋದ ಸಮಯ ಮತ್ತು ದುಡ್ಡು ಮತ್ತೆ ಸಿಗುವುದಿಲ್ಲ.  ಸಮಯ ಇರುವಾಗಲೇ ಉಪಯೋಗಿಸಿಕೊಂಡು ಬಿಡಬೇಕು ಅಂದಳು. ನನ್ನ ಹತ್ತಿರ ಸಮಯ ಇದೆ ಸೌಕರ್ಯಗಳು ಇವೆ,  ಇರುವ ಈ ಅವಕಾಶಗಳನ್ನು ಬಳಸಿಕೊಂಡು ಎಷ್ಟು ಸಾಧ್ಯವೋ ಅಷ್ಟು ಜೀವನದಲ್ಲಿ ಬೆಳೆಯಬೇಕು ನಾನು ಎಂದು ಅವಳೆಂದಾಗ ಮರು ಮಾತಾಡದೆ ಅವಳನ್ನೆ ದಿಟ್ಟಿಸುತ್ತಿದ್ದೆ ನಾನು.
ಈ ಜಗತ್ತಿನಲ್ಲಿ ಇರುವ ಅತಿ ದೊಡ್ಡ ಶಕ್ತಿಯೆಂದರೆ ಅದು ನಮ್ಮ ಮನಸಿನ ಶಕ್ತಿ, ಈ ಮನಶಕ್ತಿ ಅಪಾರವಾದದ್ದು ಇದಕ್ಕೆ ಕೊನೆಯೇ ಇಲ್ಲ.  ಮನಶಕ್ತಿ ಮತ್ತು ನಮ್ಮ ಧೃಡ ನಂಬಿಕೆಯಿಂದ ಈ ಜಗತ್ತಿನಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಸಕಾರಾತ್ಮಕವಾದ ಆಲೋಚನೆಯಿಂದ ನಾವು ಏನಾಗಬೇಕು ಏನನ್ನು ಸಾಧಿಸಬೇಕು ಎಂಬುದನ್ನು ನಿರ್ಧರಿಸಿ ಆ ವಿಷಯದ ಮೇಲೆ ಗಮನ ಹರಿಸಿದರೆ ನಮ್ಮ ಮನಸ್ಸು ಅದರೆಡೆಗೆ ಸಂಪೂರ್ಣವಾಗಿ ವಾಲಿ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ. ಸಾಧಿಸಬೇಕು ಎಂದು ಹೊರಟಾಗ ನೂರಾರು ತೊಂದರೆಗಳು ಎದುರಾಗುತ್ತವೆ ಕೆಲವು ಬಾರಿ ನಮ್ಮ ತಪ್ಪಿನಿಂದಲೂ ಕೂಡ ಎಡವಿ ಬೀಳುತ್ತೇವೆ ಆಗ  ನಮ್ಮ ಮೇಲಿನ ವಿಶ್ವಾಸವನ್ನು ನಾವು ಕಳೆದುಕೊಳ್ಳದೆ ಸತತವಾಗಿ ಕಠಿಣ ಶ್ರಮವನ್ನು ಹಾಕಿ ಪ್ರಯತ್ನಿಸಿದರೆ ಖಂಡಿತಾ ಗೆಲ್ಲುತ್ತೇವೆ.
ಒಳ್ಳೆಯ ಕೆಲಸ ಇದೆ ಸ್ವಲ್ಪ ದುಡ್ಡು ಕೂಡ ಬರುತ್ತಿದೆ ಇಷ್ಟೇ ಸಾಕು ಎಂದು ಕೂತರೆ ಎಲ್ಲರ ತರಹ ಸಾಮಾನ್ಯವಾಗಿ ಜೀವನವನ್ನು ಸಾಗಿಸಬಹುದೇ ವಿನಹ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವು ಪ್ರತಿ ದಿನ ಹೊಸದನ್ನು ಕಲಿಯಬೇಕು ನಮ್ಮ ಕಂಪರ್ಟ್ ಜೋನ್ ಅನ್ನು ಬಿಟ್ಟು ಆಚೆ ಬರಬೇಕು ಆಗ ಮಾತ್ರ ನಾವು ಹೊಸ ಪ್ರಪಂಚಗಳನ್ನು ನೋಡುಲು ಸಾಧ್ಯ, ಜೀವನದಲ್ಲಿ ಹೊಸತನ್ನು ಕಾಣಲು ಸಾಧ್ಯ.
ಬಡ ಕುಟುಂಬದಲ್ಲಿ ಹುಟ್ಟಿದ ನಾನು ಅದು ಹೇಗೆ ಲಕ್ಷಾಂತರ ರೂಪಾಯಿ ಫೀಸ್ ಕಟ್ಟೋಕೆ ಸಾಧ್ಯ ಎಂದು ನೀನು ಯೋಚಿಸಬಹುದು, ನಾನು ಬಡವಳೆ ಇರಬಹುದು ನಾನು ಯಾವತ್ತೂ ನನ್ನ ಹಿನ್ನೆಲೆಯನ್ನು ನೋಡಿ ಕನಸು ಕಾಣೋದಿಲ್ಲ ಕನಸಿಗೆ ಸಾಧನೆಯ ಗುರಿಗೆ ನಮ್ಮ ಹಿನ್ನೆಲೆ ಬೇಕಾಗಿಲ್ಲ ಸಾಧಿಸುವಂತಹ ಮನಸ್ಸು ಮಾತ್ರ ಬೇಕು.
ಹಾಗೆಯೇ ಇವತ್ತು ಸಮಾಜ ತುಂಬಾ ಒಳ್ಳೆಯದಿದೆ ಯಾರಾದರೂ ಸಾಧಿಸಬೇಕು ಎಂದು ಹೊರಟರೆ ಸಾವಿರಾರು ಜನರು ಸಹಾಯ ಮಾಡಲು ಮುಂದೆ ಬರುತ್ತಾರೆ, ಬ್ಯಾಂಕ್ ಗಳಿವೆ ಸಾಲ ಕೊಡುತ್ತವೆ.  ಇವತ್ತಿನ ದಿನ ಸಾಧನೆ ಮಾಡುತ್ತೇವೆ ಅನ್ನುವ ಮನಸ್ಸಿರುವವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಬೆಳೆಯಲು ಪೂರಕವಾದಂತಹ ವಾತಾವರಣವಿದೆ ಇಷ್ಟೆಲ್ಲಾ ಇದ್ದೂ ಯಾವುದನ್ನೂ ಉಪಯೋಗಿಸಿಕೊಳ್ಳದೆ ನಮ್ಮ ಜೀವನ ಸವೆಸಿದರೆ ಈ ಜೀವನಕ್ಕೆ ಅರ್ಥವೇ ಇರುವುದಿಲ್ಲ. ಸಾಧನೆ ಅನ್ನೊದು ಸುಮ್ಮನೆ ಬರುವುದಿಲ್ಲ ತುಂಬಾ ಏಳು ಬೀಳುಗಳು ಇರುತ್ತವೆ, ಈಗ ನಾವು ಕಾಫಿ ಕುಡಿಯುತ್ತಾ ಹೇಗೆ ಎಂಜಾಯ್ ಮಾಡುತ್ತೇವೋ ಹಾಗೆಯೇ ಎಲ್ಲಾ ಕಷ್ಟಗಳನ್ನು ಎಂಜಾಯ್ ಮಾಡಬೇಕು ಎಂದೇಳಿ ಮಿಕ್ಕ ಕಾಫಿಯನ್ನು ಕುಡಿದು ಮುಗಿಸಿ, ಸರಿ ಕಣೇ ಟೈಮ್ ಆಯಿತು ಇವಾಗ ಮೀಟಿಂಗ್ ಇದೆ ಮತ್ತೆ ಸಿಗೋಣ ಎಂದೇಳಿ ಹೊರಟುಹೋದಳು. ಗೋಪಿಕಳ ಮಾತುಗಳು ನನ್ನನ್ನು ಸಂಪೂರ್ಣವಾಗಿ ಸೆರೆಹಿಡಿದಿದ್ದವು, ಧೃಡ ಸಂಕಲ್ಪ ಮತ್ತವಳ ಸಾಧನೆಯೆಡೆಗಿನ ತುಡಿತ ಅವಳ ಪ್ರತಿ ಪದದಲ್ಲೂ ಎದ್ದು ಕಾಣುತ್ತಿತ್ತು.
ಅವಳ ಮಾತುಗಳನ್ನು ಕೇಳುತ್ತಾ ತಲೆನೋವು ನನ್ನನ್ನು ಬಿಟ್ಟುಹೋಗಿದ್ದು ಅರಿವೇ ಆಗಲಿಲ್ಲ ವೀಕ್ ಎಂಡಿನಲ್ಲಿ ಸುಮ್ಮನೆ ಟೈಮ್ ವೆಸ್ಟ್ ಮಾಡುತ್ತಿದ್ದ ನನ್ನ ತಪ್ಪಿನ ಅರಿವಾಗಿ ನಾನು ಕೂಡ ಗೋಪಿಕಳ ಹಾಗೇ ಸಾಧನೆಯೆಡೆಗೆ ಹೋಗಬೇಕೆಂಬ ನಿರ್ಧಾರದೊಂದಿಗೆ ಕ್ಯಾಂಟೀನ್ ನಿಂದ ಆಚೆಬಂದೆನು.

No comments:

Post a Comment

Note: only a member of this blog may post a comment.