Tuesday 23 April 2013

22/04/2013 ರ ಕನ್ನಡಪ್ರಭ ದಿನಪತ್ರಿಕೆಯಲ್ಲಿ ನನ್ನ ಲೇಖನ "ಮುಪ್ಪು ಒಪ್ಪು"



ಮುದ್ದಿಸಿದ ಪೋಷಕರು ಮುಪ್ಪಾದರೂ ಬೇಕು ..!

ನಡೆದಾಡುವ ದೇವರುಗಳೆಂದರೆ ಅದು ಅಪ್ಪ ಅಮ್ಮ ಮಾತ್ರ. ದೇವರು ಎಲ್ಲ ಕಡೆ ಇರಲು ಸಾಧ್ಯವಿಲ್ಲದೇ ತಂದೆ ತಾಯಿಯನ್ನು ಸೃಷ್ಟಿಸಿದನಂತೆ. ಕೂಸು ಕಣ್ಣು ಬಿಡುವ ಮುನ್ನವೇ ಸಾವಿರಾರು ಕನಸು ಕಟ್ಟಿ ತನ್ನ ಮಕ್ಕಳಿಗೆ ಪ್ರಪಂಚದ ಎಲ್ಲಾ ಸುಖ ಸವಲತ್ತು ಕಲ್ಪಿಸಬೇಕೆಂದು ಜವಾಬ್ದಾರಿಗಳ ಸರಮಾಲೆಗೆ ಹೆಗಲು ಕೊಟ್ಟ ತಂದೆನವ ಮಾಸ ತನ್ನೊಳಗೆ ಅವಿತಿಟ್ಟು ಎಲ್ಲ ನೋವ ಸಹಿಸಿ ತಮ್ಮೆಲ್ಲಾ ಕನಸುಗಳಿಗೆ ರೆಕ್ಕೆ ಪುಕ್ಕ ಕಟ್ಟಲು ತನ್ನ ಒಡಲಕುಡಿಯನ್ನು ಭೂಮಿಗೆ ತರುವ ತಾಯಿ, ಈ ಎರಡು ಜೀವಗಳನ್ನು ಬಣ್ಣಿಸಲು ಪದಗಳೇ ಸಾಲದು.

ತಮ್ಮೆಲ್ಲಾ  ಆಸೆ ಬದಿಗಿಟ್ಟು ಕಷ್ಟಗಳ ನುಂಗಿ ಮಕ್ಕಳಿಗೆ ಬೇಕ್ಕಾದ್ದನ್ನೆಲ್ಲಾ ಕಲ್ಪಿಸಿ, ತಾವು ಉಪವಾಸವಿದ್ದರೂ ಮಕ್ಕಳಿಗೆ ಹೊತ್ತಿಗೆ ಸರಿಯಾಗಿ ಹೊಟ್ಟೆ ತುಂಬಿಸುವ ಮಾತಾಪಿತೃಗಳು, ನಾವು ಪಟ್ಟ ಕಷ್ಟವನ್ನು ನಮ್ಮ ಮಕ್ಕಳು ಪಡಬಾರದು ಎಂದು ಅವರಿಗೆ ಅವರ ಬಾಲ್ಯದಲ್ಲಿ ಸಿಗದ ಎಲ್ಲವನ್ನೂ ಮಕ್ಕಳಿಗೆ ಮಾಡುತ್ತಾರೆ. ನಾವು ಸಾಧಿಸಲಾಗದ್ದನ್ನು ನಮ್ಮ ಮಕ್ಕಳಾದರೂ ಸಾಧಿಸಲಿ ಎಂದು ತಮ್ಮ ಜೀವನವನ್ನೇ ಮಕ್ಕಳಿಗಾಗಿ ಧಾರೆ ಎರೆಯುತ್ತಾರೆ.  ತಮ್ಮ ಆರ್ಥಿಕ ಮಿತಿ ಮಧ್ಯೆಯೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ  ತುಡಿತದಲ್ಲಿ ಸಾಲಸೋಲ ಮಾಡಿಯಾದರೂ ಉತ್ತಮ, ಉನ್ನತ ಶಿಕ್ಷಣವನ್ನೇ ಕೊಡಿಸುತ್ತಾರೆ. ಇಷ್ಟೆಲ್ಲಾ ಮಕ್ಕಳಿಗಾಗಿಯೇ ಜೀವ ತೇಯುವ ತಂದೆ ತಾಯಿಯೇ ತಮ್ಮ ಮುಪ್ಪಿನ ಕಾಲದಲ್ಲಿ ಮಾತ್ರ ನಮ್ಮ ಮಕ್ಕಳು ಆಸರೆಯಾಗಬೇಕೆಂಬ  ಸಣ್ಣ ಆಸೆಯೂ ಇಂದಿನ ಮಕ್ಕಳಿಂದ ಈಡೇರುತ್ತಿಲ್ಲವೆಂಬ ಕೊರಗು ಎಲ್ಲ ತಂದೆ ತಾಯಿಗಳಲ್ಲಿದೆ.

ತಂದೆ ತಾಯಿಯರಿಬ್ಬರೇ ಐದಾರು ಮಕ್ಕಳನ್ನು ಸಾಕಿ ಸಲಹಿದರೂ ಕೊನೆಗಾಲದಲ್ಲಿ ಮಾತ್ರ ಅದೇ ಐದಾರು ಮಕ್ಕಳಿಂದ ತಂದೆ ತಾಯಿಗಳನ್ನು ಸಾಕಲು ಹೆಣಗಾಡುತ್ತಾರೆ ಎಂಬುದು ಸುಳ್ಳೇನಲ್ಲ. ಎಲ್ಲ ಮಕ್ಕಳು ಅದೇ ರೀತಿ ಎಂದಲ್ಲವಾದರೂ ಬಹುತೇಕ ಮಕ್ಕಳು ತಾವು ದೊಡ್ಡವರಾದ ಮೇಲೆ ತಂದೆ ತಾಯಿಗಳನ್ನು ನಿರ್ಲಕ್ಷಿಸುತ್ತಿರುವುದು ಅಷ್ಟೇ ಸತ್ಯ.
ತಮ್ಮ ಜೀವಿತಾವಧಿಯ ಕೊನೆ ದಿನಗಳಲ್ಲಿ ತಂದೆ ತಾಯಿಗಳು ತಮ್ಮ ಮಕ್ಕಳಿಂದ ಬಯಸುವುದು ಕೇವಲ ಪ್ರೀತಿ,ಮಮತೆ ಒಂದೆರಡೊತ್ತಿನ ಊಟ ಮಾತ್ರವೇ. ಅಷ್ಟನ್ನು ಕೊಟ್ಟರೆ ಸಾಕು ನಮ್ಮ ಹಿರಿ ಜೀವಗಳು ನೆಮ್ಮದಿಯಿಂದ ಕಾಲ ಕಳೆಯುತ್ತವೆ.

ಇಷ್ಟು ಮಾಡಿ ಸಾಕು...
ಪೋಷಕರನ್ನು ಖುಷಿಯಿಂದಿರಿಸಲು ತೀರಾ ಶ್ರಮಪಡಬೇಕಿಲ್ಲ. ನಮ್ಮ ದಿನ ನಿತ್ಯದ ಕೆಲಸಗಳ ಮಧ್ಯೆ ಕೆಲ ಮಾರ್ಪಾಡು ಮಾಡಿಕೊಂಡರೆ ಸಾಕು.
     
·         ಹಿರಿಯ ಜೀವಗಳಿಗೆ ಮಕ್ಕಳಿಂದ ಬೇಕಿರುವುದು ಆಸ್ತಿ ಅಂತಸ್ತಲ್ಲ ಕೇವಲ ಪ್ರೀತಿ ಮಾತ್ರ, ಹಾಗಾಗಿ ಸಾಧ್ಯವಾದಾಗಲೆಲ್ಲಾ ಪೋಷಕರ ಜತೆ ಪ್ರೀತಿಯಿಂದ ಮಾತನಾಡಿ.

·         ಪೋಷಕರ ಮಾತುಗಳಿಗೆ ಸಾಧ್ಯವಾದಷ್ಟು ಕಿವಿ ಕೊಡಿ. ಅವರ ಸಮಸ್ಯೆ ಬಗೆ ಹರಿಸದಿದ್ದರೂ ಪರವಾಗಿಲ್ಲ ಸುಮ್ಮನೆ ಅವರ ಪಕ್ಕ ಕುಳಿತು ಕೇಳಿಸಿಕೊಳ್ಳಿ.

·         ಸದಾ ಎಲ್ಲ ವಿಷಯಗಳಿಗೂ ಮಕ್ಕಳು ನಮ್ಮದೊಂದು ಮಾತು ಕೇಳಲಿ ಎಂಬಾಸೆ ಎಲ್ಲ ಪೋಷಕರದ್ದು. ಹಾಗಾಗಿ ನೀವು ಏನೇ ಮಾಡುವುದಿದ್ದರೂ ಒಂದು ಮಾತು ಅವರ ಗಮನಕ್ಕೆ ತನ್ನಿ. ಇದರಿಂದ ನಿಮಗೇನೂ ನಷ್ಟವಿಲ್ಲ ಆದರೆ ಪೋಷಕರಿಗೆ ಖುಷಿಯಾಗುತ್ತದೆ.

·         ನಿಮ್ಮ ಪೋಷಕರು ಈಗೀಗ ನಿಮಗೆ ಹೊರೆಯಾಗುತ್ತಾರೆ ಎಂದೆನಿಸಿ, ವೃದ್ದಾಶ್ರಮ ಅಥವಾ ಬೇರೆ ಮನೆಗೆ ಕಳುಹಿಸುವ ಮುನ್ನ ಆಲೋಚಿಸಿ, ಮುಂದ್ದೊಂದು ದಿನ ನಿಮಗೂ ವಯಸ್ಸಾಗುತ್ತದೆ ಆಗ ನಿಮ್ಮ ಮಕ್ಕಳು ಹಾಗೆಯೇ ಯೋಚಿಸುತ್ತಾರೆ.

·         ಕಾಲ ಬದಲಾದರೂ ಅದಕ್ಕೆ ತಕ್ಕಂತೆ ಪೋಷಕರು ಬಹು ಬೇಗ ಬದಲಾಗರು. ಹಾಗಾಗಿ ಅವರನ್ನು ಅವರಷ್ಟಕ್ಕೆ ಬಿಟ್ಟು ಬಿಡಿ. ಹಳೆಪದ್ದತಿ ಹಳೆಜನ ಎಂದು ಹೀಗೆಳೆಯಬೇಡಿ.

·         ನಿಮಗಾಗಿ ಜೀವವನ್ನೇ ಸವೆಸಿದವರು ಅವರು, ಹಾಗಾಗಿ ಸಣ್ಣ ಪುಟ್ಟ ಸಮಸ್ಯೆಗಳಿಗೆ ಶೀಘ್ರವೇ ಸ್ಪಂದಿಸಿ ನೀವು ಚಿಕ್ಕವರಾಗಿದ್ದಾಗ ಕೇಳುವ ಮೊದಲೇ ನಿಮ್ಮಾಸೆಗಳನ್ನು ಈಡೇರಿಸಿದವರು ಅವರು ಎಂಬುದು ನೆನಪಿರಲಿ.

·         ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ನೀವು ಮಾಡಿದ್ದನ್ನೇ ನಿಮ್ಮ ಮಕ್ಕಳು ಮಾಡುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕ್ಕೊಂಡು ನಿಮ್ಮ ಪೋಷಕರೊಂದಿಗೆ ಪ್ರೀತಿ,ಸಹನೆ ಮಮತೆಯಿಂದ ವರ್ತಿಸಿ.
 
                                                ಇಂತಿ,
                                                        ಕವಿತಾಗೌಡ



Friday 19 April 2013

ಏಪ್ರಿಲ್ ಸಂಚಿಕೆಯ ಸಂಚಲನ ಮಾಸ ಪತ್ರಿಕೆಯಲ್ಲಿ ನನ್ನ ಲೇಖನ "ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಎಳ್ಳು ನೀರು ಬಿಡುವುದಾದರು ಎಂತು ...?".





 ಹೆಣ್ಣೆಂದರೆ  ತಾಯಿ, ಹೆಣ್ಣೆಂದರೆ ಸಹೋದರಿ, ಹೆಣ್ಣೆಂದರೆ ಗೆಳತಿ, ಹೆಣ್ಣೆಂದರೆ ಮಡದಿ, ಹೆಣ್ಣೆಂದರೆ ಮಗಳು, ಹೀಗೆ  ತನ್ನ ಜೀವನದ ಎಲ್ಲಾ ಘಟ್ಟದಲ್ಲೂ  ಒಬ್ಬ ಗಂಡಿನ ಜೀವನದಲ್ಲಿ  ಏಳಿಗೆಗಾಗಿ, ಅವನ ಸುಖ ಸಂತೋಷಗಳಿಗಾಗಿ ಸದಾ ಹಸನ್ಮುಖಿಯಾಗಿ ತನ್ನ ಜೀವ-ಜೀವನವನ್ನೇ ಗಂಧದಂತೆ ಸವೆಸುತ್ತಾಳೆ. ಭೂಮಿತಾಯಿ ತನ್ನೊಳಗೆ ಎಲ್ಲವನ್ನು ಉದುಗಿಸಿಟ್ಟುಕೊಂಡು ಸಕಲ ಚರಾಚರಗಳನ್ನು ಸಲಹುವಂತೆ ಹೆಣ್ಣು ತನ್ನ ಮುಷ್ಠಿಯಷ್ಟಿರುವ ಹೃದಯದಲ್ಲಿ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು, ನೋವು-ಅವಮಾನಗಳನ್ನು ಅಡಗಿಸಿಟ್ಟುಕೊಂಡು ಎಲ್ಲರನ್ನು ಪ್ರೀತಿಸುತ್ತಾಳೆ.

ಈ ಸಮಾಜ ಹೆಣ್ಣು ಸಹನಾಮಯಿ, ಕರುಣಾಮಯಿ, ಶಾಂತಮೂರ್ತಿ ಎಂದೆಲ್ಲಾ ಅವಳನ್ನು ಕರೆದು ಹಾಡಿ ಹೊಗಳಿ ಬಣ್ಣಿಸಿ ವರ್ಣಿಸಿ ಇಂದು ಅವಳನ್ನು ಅಸಹಾಯಕಳಾಗಿ ನಿಲ್ಲುವಂತೆ ಮಾಡಿದೆಯೇನೋ ಎನಿಸುತ್ತಿದೆ. ಅವಳ ಸುತ್ತಲೂ ಲಕ್ಷ್ಮಣ ರೇಖೆಯ ತರಹ ಇತಿಮಿತಿಗಳನೇರಿ ಬಂಧಿಸಿತೇನೋ ಎಂದೆನಿಸುತ್ತಿದೆ.

ಪುರಾಣದಲ್ಲಿ ಆದಿಶಕ್ತಿಯು ದೇವತೆಗಳಿಗೆಲ್ಲ ರಕ್ಷಾಕವಚವಾಗಿದ್ದಳು. ರಾಕ್ಷಸರ ಉಪಟಳಗಳು ಅತಿಯಾದಾಗ ಬ್ರಹ್ಮ ವಿಷ್ಣು ಮಹೇಶ್ವರರಾದಿಯಾಗಿ ತಂಡೋಪತಂಡವಾಗಿ ಅವಳಿರುವಲ್ಲಿಗೆ ಹೋಗಿ, ಅವಳನ್ನು ಹಾಡಿ ಹೊಗಳಿ ಅವರ ಕಷ್ಟಗಳನ್ನು ತೋಡಿಕೊಂಡು ತಮ್ಮನ್ನು ಕಷ್ಟದಿಂದ ಪಾರುಮಾಡು ಎಂದು ಬೇಡಿಕೊಳ್ಳುತ್ತಿದ್ದರು . ವಿವಿಧ ಅವತಾರಗಳನೆತ್ತಿ ರಾಕ್ಷಸರ ಸಂಹರಿಸಿ ರಕ್ಷಿಸುತ್ತಿದ್ದ ಹೆಣ್ಣು ಇಂದು ತನ್ನ ರಕ್ಷಣೆಗಾಗಿ ಕೈ ಚಾಚಿ ನಿಲ್ಲಬೇಕಾಗಿದೆ. ಪ್ರತಿದಿನವೂ ತನ್ನ ಮೇಲಾಗುವ ದೌರ್ಜನ್ಯದ ಪೆಟ್ಟನ್ನು ಕಂಡು ಕಾಣದಂತೆ ಸಹಿಸಬೇಕಾಗಿದೆ.

ಹುಟ್ಟಿನಿಂದಲೇ ಶುರುವಾಗುತ್ತೆ ತಾರತಮ್ಯ. ಕಣ್ಣಬಿಡುವ ಮುನ್ನವೇ ಭ್ರೂಣ ಹತ್ಯೆಯ ಹೆಸರಲ್ಲಿ ಸಾಯುವ ಸಂಕಷ್ಟ. ಎಲ್ಲರಿಗೂ ಮುಕ್ತಿ ಮಂತ್ರ ಪಟಿಸುವ ವಂಶೋದ್ದಾರಕ ಬೇಕು. ಹುಟ್ಟೋ ಮಗು ಹೆಣ್ಣೋ ಗಂಡೋ ಯಾವುದಾದರೂ ಪರವಾಗಿಲ್ಲ ಅಂದುಕೊಳ್ಳುವವರ ಮನಸ್ಸಲ್ಲೂ ಹೆಣ್ಣು ಮಗು ಹುಟ್ಟಿದಾಗ ಆಗುವ ಖುಷಿಯೇ ಬೇರೆ. ಗಂಡು ಮಗು ಹುಟ್ಟಿದಾಗ ಆಗುವ ಖುಷಿಯೇ ಬೇರೆ.
ಎತ್ತ ನೋಡಿದರತ್ತ ರಾಕ್ಷಸರ ಹಿಂಡಿದೆ. ಎಲ್ಲಿ ಯಾರು, ಯಾವಾಗ, ಹೇಗೆ ಮುತ್ತಿಗೆ ಹಾಕುತ್ತಾರೋ ಎಂಬ ಭಯದಲ್ಲಿ ಜೀವನ ಸಾಗಿಸಬೇಕಾಗಿದೆ. ಹೆಣ್ಣಾಗಿ ಹುಟ್ಟಿ ಹುಣ್ಣಾಗುವುದಕ್ಕಿಂತ ಗಿಡದ ಮೇಲಿನ ಹಣ್ಣೇ ವಾಸಿ. ಹಣ್ಣಾದರೂ ತಿನ್ನೋದಿಕ್ಕೆ ಮಾಗಬೇಕು. ಆದರೆ ಹೆಣ್ಣು ಹುಟ್ಟಿದರೆ ಸಾಕು ಭೋಗಿಸುವವರಿಗೆಷ್ಟು ಬಾಗಿಲುಗಳು..! ಮುಗ್ದ ನಗುವಿನ ಪ್ರಪಂಚದ ಪರಿವೇ ಇಲ್ಲದ ಮಗುವಿನಲ್ಲೂ ಕಾಮವನ್ನು ಕಾಣುವ ನೀಚರಿದ್ದಾರೆ. ಬೇರೆಯವರೇಕೆ ಜನ್ಮದಾತನೆನಿಸಿಕೊಂಡ ತಂದೆ ಕೂಡ ಮಗಳನ್ನು ಭೋಗಿಸುವ ಕಾಮಾಂಧನಾಗಿದ್ದಾನೆ.

ಮಣ್ಣಿನಂತ ಮಕ್ಕಳಿಗೆ ಒಳ್ಳೆಯ ಬುದ್ದಿ ಕಲಿಸಿ, ತಿದ್ದಿ ತೀಡಿ ಶಿಲೆಗಳನ್ನಾಗಿ ಮಾಡಿ ಶಿಲ್ಪಿ ಎನಿಸಿಕೊಳ್ಳುವ ಗುರುವೇ ಇಂದು ಭಕ್ಷಕನಾಗಿ ತನ್ನ ವಾಂಛೆಯನ್ನು ತೀರಿಸಿಕೊಳ್ಳಲು ಶಾಲೆಗಳನ್ನು ಬಳಸಿಕೊಳ್ಳುತ್ತಿದ್ದಾನೆ. ಮಾಗದ ಮನಸ್ಸುಗಳನ್ನು ಘಾಸಿಗೊಳಿಸುತ್ತಿದ್ದಾನೆ.  ಹಡೆದವ್ವ ಪ್ರತಿದಿನವು ತನ್ನ ಮಗಳನ್ನು ರಕ್ಷಿಸುವುದಕ್ಕಾಗಿ ಅವಳ ಸುತ್ತಲೂ ಇರುವವರು ಮಗಳ ಮೇಲೆ ತೋರುವ ಪ್ರೀತಿಯನ್ನು ಅನುಮಾನಿಸುವಂತಾಗಿದೆ.

ಕಾಲೇಜು ಮೆಟ್ಟಿಲೇರಿದ ಮೊಗ್ಗಿನ ಮನಸ್ಸಿನ ಪೋರಿಗೆ, ಚಿಟ್ಟೆ ರೆಕ್ಕೆ ಬಿಚ್ಚುವಂತೆ ತಾನೂ ಮನ ಬಿಚ್ಚಿ ಹಾಡಿ ಕುಣಿದು ನಲಿಯುವ ಆಸೆ. ಹರಯದಲ್ಲಿ ಸಹಜವಾಗೇ ಹೊಸತನದ ಹುಡುಗಾಟಕ್ಕೆ ನಿಲ್ಲುತ್ತೆ. ಹೃದಯಕ್ಕೆ ಹತ್ತಿರವಾಗುವವರ ಸಂಖ್ಯೆ ದೊಡ್ಡದು. ಅದು ಸ್ನೇಹವೋ ಪ್ರೀತಿಯೋ ಎಂದು ಯೋಚನೆ ಮಾಡದ ವಯಸ್ಸು ಅದು.  ಆಗ ಪಾರಿಜಾತದಂತಹ ಪೋರಿಯನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ಆಸ್ವಾದಿಸಿ  ಅಡಗಿಸಿಬಿಡೋ ಅದೆಷ್ಟು ಘಟನೆಗಳು ನಡೆದಿಲ್ಲಾ..? ಒಪ್ಪದಿದ್ದ ಹುಡುಗಿಯರಿಗೆ ಆಸಿಡ್ ಎಂಬ ಬೆದರಿಕೆ ಹಾಕಿ ಮೊಗ್ಗರಳಿ ಹೂವಾಗುವ ಮುನ್ನವೇ ಬಾಡಿಸಿ ಬಿಡುವ ಅದೆಷ್ಟು ನೀಚರಿದ್ದಾರೆ, ಈ ಭೂಮಿ ಮೇಲೆ. ಹೀಗೆ ಬಣ್ಣ ಬಣ್ಣದ ಕನಸುಗಳನ್ನು ಹೊಸಕಿ ಹಾಕುವ ವಿಕೃತ ಮನಸ್ಸಿನವರಿಗೆ ಕೊನೆಯೆಂದೋ ...!
ಅವಳು ಮದುವೆಯಾಗಿ ಗಂಡನ ಆಸರೆಯಲ್ಲಿರುವಾಗಲಾದರೂ ನೆಮ್ಮದಿಯಿಂದ ಇರುತ್ತಾಳಾ.. ? ಇಲ್ಲ .  ಪ್ರತಿದಿನ ಪ್ರತಿಕ್ಷಣ ಹೋದಕಡೆ ಬಂದ ಕಡೆ ಕಾಮಾಂಧರು ಅವಳ ಮೇಲೆ ಕಣ್ಣು ಹಾಕುತ್ತಲೇ ಇರುತ್ತಾರೆ.

ಆದರೂ ಸಮಾದಾನ ಪಟ್ಟುಕೊಳ್ಳುವಂತ ಬೆಳವಣಿಗೆಗಳು ನಡೆದಿವೆ. ಹೆಣ್ಣು ಇಂದು ಮೊದಲಿನಂತಿಲ್ಲ ಗಂಡಿಗೆ ಸರಿಸಮನಾಗಿ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಚಾಕಾಚಕ್ಯತೆಯನ್ನು ಪ್ರದರ್ಶಿಸಿ ಮುಂದಿದ್ದಾಳೆ. ತೊಡುವ ಬಟ್ಟೆಯನ್ನಷ್ಟೇ ಅಲ್ಲದೆ ತನ್ನ ವ್ಯಕ್ತಿತ್ವವನ್ನು ಸಹ ಬದಲಾಯಿಸಿಕೊಂಡಿದ್ದಾಳೆ. ಸಮಾಜದಲ್ಲಿ ತನ್ನದೇ ಆದ ಸ್ಥಾನಮಾನವನ್ನು ತಂದುಕೊಂಡಿದ್ದಾಳೆ. ಸಾಕಷ್ಟು ಬಲಿಷ್ಠಳಾಗಿದ್ದಾಳೆ. ಆದರೂ ಅವಳ ಮೇಲೆ ನಡೆಯುತ್ತಿರುವ  ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳಿಗೆ ಯಾವುದೇ ಅಡೆ ತಡೆ ಕಾಣುತ್ತಿಲ್ಲ.

ಹೆಣ್ಣು ಪ್ರಕೃತಿಗೆ ಸಮಾನಳು. ಪ್ರಕೃತಿಗೆ ಗೊತ್ತಿರುವುದು ಒಂದೇ ಎಲ್ಲವನ್ನು ಸಹಿಸಿಕೊಂಡು ಸದಾ ಶಾಂತವಾಗಿರುವುದು. ತಾಳಲಾಗದ ಸ್ಥಿತಿಯಲ್ಲಿ ವಿಕೋಪಗೊಳ್ಳುವುದು. ಹೆಣ್ಣು ಸಹ ಸದಾ ಶಾಂತಿಯಿಂದ ಸಹಿಸಿಕೊಳ್ಳುತ್ತಾಳೆ. ಸಹಿಸಲಾಗದ ಸ್ಥಿತಿಯಲ್ಲಿ ತಿರುಗಿ ಬೀಳುತ್ತಾಳೆ.

ಮೊನ್ನೆ ದೆಹಲಿ ಹೆಣ್ಣುಮಗಳ ಮೇಲೆ ಅತ್ಯಾಚಾರವಾದಾಗ ಇಡೀ ದೇಶವೇ ಮರುಗಿ, ಹೆಣ್ಣು ಕುಲವೇ ಬೀದಿಗಿಳಿದು ಪ್ರತಿಭಟಿಸಿತು. ತಪ್ಪಿತಸ್ತರಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಸಾರಿ-ಸಾರಿ ಕಾನೂನಿನ ಕದ ತಟ್ಟಿದರು. ಇಂತಹ ಅತ್ಯಾಚಾರಗಳು-ದೌರ್ಜನ್ಯಗಳು  ಹೊಸತಲ್ಲ. ಅನಾದಿ ಕಾಲದಿಂದಲೂ ಮತ್ತೆ ಮತ್ತೆ ತಲೆ ಎತ್ತುತ್ತಿವೆ.  ಮೊದಲೆಲ್ಲ ಹೆಣ್ಣು ಅನಕ್ಷರಸ್ಥಳಾಗಿದ್ದಳು. ಅಮಾಯಕಳಾಗಿ ನಾಲ್ಕು ಗೋಡೆಗಳ ಮಧ್ಯೆ ನಿಂತು, ಪುರುಷ ಪ್ರಧಾನ ಸಮಾಜದಲ್ಲಿ ತನಗಾದ ಅನ್ಯಾಯದ ಬಗ್ಗೆ ದನಿ ಎತ್ತಲೂ ಆಗದೆ ನಿಶ್ಯಕ್ತಳ್ಳಂತಿದ್ದಳು. ಆದ್ದರಿಂದ ಇಂತಹ ನೀಚ ಕೃತ್ಯಗಳು ಬೆಳಕಿಗೆ ಬರುತ್ತಿರಲಿಲ್ಲ.
ಈಗ ಹೆಣ್ಣು ವಿದ್ಯಾವಂತೆ, ಬುದ್ದಿವಂತೆ, ಮೇಲಾಗಿ ಸ್ವತಂತ್ರಳು. ಆದ್ದರಿಂದಲೇ ತನಗಾದ ಅನ್ಯಾಯದ ವಿರುದ್ದ ದನಿ ಎತ್ತುತ್ತಿದಾಳೆ. ಬೇರೆಯವರ ಕಷ್ಟಕ್ಕೆ ದನಿಗೂಡಿಸುತ್ತಿದ್ದಾಳೆ.  ಇಷ್ಟಾದರೂ ಹಳ್ಳಿಗಾಡಿನ ಬಡ ಮತ್ತು ಮಧ್ಯಮ ವರ್ಗದ ಜನರಲ್ಲಿ ಅನ್ಯಾಯದ ವಿರುದ್ದ ಆಕ್ರೋಶಗೊಳ್ಳದ ಮಹಿಳೆಯರಿದ್ದಾರೆ. ಇದುವರೆಗೂ ಅತ್ಯಾಚಾರದ ಪ್ರಕರಣಗಳು ಪೋಲಿಸ್ ಠಾಣೆ ಮೆಟ್ಟಿಲೇರಿರುವುದು ಶೇಕಡ ೨೫ ರಷ್ಟಿದ್ದರೆ  ಅಪರಾಧಿಗಳ ಬೆದರಿಕೆಗೆ ಹೆದರಿ ಶೇಕಡ ೨೫ ಮಂದಿ ಸುಮ್ಮನಿದ್ದಾರೆ. ಇನ್ನುಳಿದವರು ಸಮಾಜದಲ್ಲಿ ಮಾನ-ಮರ್ಯಾದೆ ಎಂಬ ಚೌಕಟ್ಟಿನಲ್ಲಿ ಅನ್ಯಾಯಗಳನ್ನು ಸಹಿಸಿಕೊಂಡಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ "ಹೆಣ್ಣಿನ ನೋವು-ನಲಿವುಗಳಿಗೆ ಆಕೆಯೇ ಕಾರಣ" ಎಂಬ ಓಶೋ ಅವರು ಹೇಳಿದ ಮಾತು ನೆನಪಾಗುತ್ತದೆ.  ಆದರೂ ಯಾವೊಂದು ಹೆಣ್ಣೂ ಸಹ ಬೇಕೆಂದು ತನ್ನ ಜೀವನವನ್ನು, ಜೀವನದ ಮೌಲ್ಯಗಳನ್ನು ಹೊಸಕಿ ಹಾಕಿಕೊಳ್ಳಲು ಇಷ್ಟಪಡುವುದಿಲ್ಲ. ಇಷ್ಟೆಲ್ಲಾ ಆಗುತ್ತಿರುವುದು ಇಂದಿನ ಸಮಾಜದಲ್ಲಿ ಸಂಬಂಧಗಳ ಬೆಲೆ ಮತ್ತು ಸಂಸ್ಕಾರಗಳು ಕಾಣೆಯಾಗುತ್ತಿರುವುದರಿಂದಲೇ.
ನಾವು ಎಷ್ಟೇ ಪ್ರತಿಭಟಿಸಿ ಎಲ್ಲಾ ಅನಿಷ್ಟಗಳಿಗೂ ನೀನೇ ಕಾರಣ ಎಂದು ಕಾನೂನು ವ್ಯವಸ್ಥೆಯನ್ನು ದೂರಿದರೂ, ಆಳುವ ವರ್ಗದ ಮಾನವನ್ನು ಗಾಳಿಯಲ್ಲಿ ತೂರಿದರೂ, ಇಂತಹ ಕೃತ್ಯಗಳಿಗೆ ಎಳ್ಳು ನೀರು ಬಿಡುವುದು ಕಷ್ಟ. ನಮ್ಮ ಸಮಾಜ ಹೆಣ್ಣನ್ನು ನೋಡುವ ರೀತಿ ಬದಲಾಗಬೇಕು. ಅವಳನ್ನು ನಮ್ಮ ಮನೆಯ ತಾಯಿಯಂತೆ, ಸಹೋದರಿಯಂತೆ ಕಾಣಬೇಕು.  ಕಾಮ ಎನ್ನುವ ಕಾಮಾಲೆ(ಜಾಂಡೀಸ್)ಯಿಂದ ಮುಕ್ತವಾಗಬೇಕು. ಸಂಸ್ಕೃತಿ ಸಂಪ್ರದಾಯ, ಹೆಣ್ಣಿನ ಬಗ್ಗೆ ಇರುವ ಯೋಚನಾ ಶೈಲಿ ಬದಲಾಗಬೇಕು. ಈ ಎಲ್ಲಾ ಬೆಳವಣಿಗೆಗಳ ಜೊತೆಗೆ ಕಾನೂನು ವ್ಯವಸ್ಥೆಯಲ್ಲಿ ಹೆಣ್ಣಿನ ಸುರಕ್ಷತೆಯ ಬಗ್ಗೆ ಮಹತ್ವದ ಕಾನೂನೊಂದನ್ನು ಸ್ವಲ್ಪ ಬಿಗಿಯಾಗಿ ರಚಿಸಿ, ಅನುಷ್ಠಾನಗೊಳಿಸಿದಾಗಲೇ ಬದಲಾವಣೆಯನ್ನು ಕಾಣಬಹುದು.  ಅಸಹಾಯಕ ಹೆಣ್ಣು ಜೀವಗಳು ನೆಮ್ಮದಿಯ ನಿಟ್ಟುಸಿರು ಬಿಡುವುದನ್ನು ಕಾಣಬಹುದು. ಅಂದ ಹಾಗೆ ಇದು ಪುರುಷ ವಿರೋಧಿ ನೀತಿಯೂ ಅಲ್ಲ, ಸ್ತ್ರೀ ವಾದವೂ ಅಲ್ಲ. ಕಣ್ಣಿಗೆ ಕಾಣುವ ಕರಾಳ ಮುಖದ ಅವಲೋಕನ.  
                                  
                                                                        ಇಂತಿ,
                                                                                ಕವಿತಾಗೌಡ

Sunday 31 March 2013

31/3/2013 ರ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ಲೇಖನ "ಮುದ್ದಿಸುವ ಪೋಷಕರು ಮುಪ್ಪಾದ ಮೇಲೇಕೆ ಬೇಡ ".


ಅಪ್ಪ ಅಮ್ಮ ನಮ್ಮ ಕಣ್ಣ ಮುಂದಿರುವ ದೇವರುಗಳು. ಕೂಸು ಕಣ್ಣ ಬಿಡುವ ಮುನ್ನವೇ ಸಾವಿರಾರು ಕನಸು ಕಟ್ಟಿ ತನ್ನ ಮಕ್ಕಳಿಗೆ ಪ್ರಪಂಚದ ಎಲ್ಲಾ ಸುಖ ಸವಲತ್ತುಗಳನ್ನು ಕಲ್ಪಿಸಬೇಕೆಂದು ಜವಾಬ್ದಾರಿಗಳ ಸರಮಾಲೆಗೆ ಹೆಗಲು ಕೊಟ್ಟ ತಂದೆ, ನವ ಮಾಸ ತನ್ನೊಳಗೆ ಅಡವಿಟ್ಟು ಎಲ್ಲ ನೋವ ಸಹಿಸಿ ತಮ್ಮೆಲ್ಲ ಕನಸುಗಳಿಗೆ ರೆಕ್ಕೆ ಪುಕ್ಕ ಕಟ್ಟಲು ತನ್ನ ಒಡಲಕುಡಿಯನ್ನು ಭೂಮಿಗೆ ತರುವ ತಾಯಿ, ಎರಡು ಜೀವಗಳನ್ನು ಬಣ್ಣಿಸಲು ಪದಗಳೇ ಉಳಿದಿಲ್ಲ.

ತಮ್ಮೆಲ್ಲಾ ಆಸೆಗಳ ಬದಿಗಿಟ್ಟು ಕಷ್ಟಗಳ ನುಂಗಿಕೊಂಡು ಮಕ್ಕಳಿಗೆ ಬೇಕ್ಕಾದ್ದನ್ನೆಲ್ಲಾ ಮಾಡುತ್ತಾರೆ. ತಾವು ತಿನ್ನುವ ತುತ್ತನ್ನ ನಮ್ಮ ಮಕ್ಕಳು ತಿಂದರೆ ಚನ್ನಾಗಿರುತ್ತದಲ್ಲಾ ಎಂದು ಮಕ್ಕಳ ಬಾಯಿಗಿಡುತ್ತಾರೆ. ಏನೇ ತೆಗೆದುಕೊಳ್ಳಬೇಕಾದರೂ ತಂದೆ ತಾಯಿಗಳು ಮಕ್ಕಳಿಗೆ ಬೇಕಾದ್ದನ್ನು ಕೊಂಡು ನಂತರ ಅವರಿಗೆ ಬೇಕಾದ್ದನ್ನು ಕೊಳ್ಳುತ್ತಾರೆ. ನಾವು ಪಟ್ಟ ಕಷ್ಟವನ್ನು ನಮ್ಮ ಮಕ್ಕಳು ಪಡಬಾರದು ಎಂದು ಅವರಿಗೆ ಅವರ ಬಾಲ್ಯದಲ್ಲಿ ಸಿಗದ ಎಲ್ಲವನ್ನು ಮಕ್ಕಳಿಗೆ ಮಾಡುತ್ತಾರೆ. ನಾವು ಸಾಧಿಸಲಾಗದ್ದನ್ನು ನಮ್ಮ ಮಕ್ಕಳಾದರೂ ಸಾಧಿಸಲಿ ಎಂದು ತಮ್ಮ ಜೀವನವನ್ನೇ ಮಕ್ಕಳಿಗಾಗಿ ಧಾರೆ ಎರೆಯುತ್ತಾರೆ.
ಶಾಲೆಗೆ ಕಳುಹಿಸುವಾಗ ತಮ್ಮ ಆರ್ಥಿಕ ಸ್ಥಿತಿಗಿಂತ ಸ್ವಲ್ಪ ಹೆಚ್ಚಿನ ಮಟ್ಟದ ಶಾಲೆಯನ್ನೇ ಆರಿಸಿ ಕಳುಹಿಸುತ್ತಾರೆ. ತಮಗೆ ಏನೇ ತೊಂದರೆ ಇದ್ದರೂ ಮಕ್ಕಳಿಗೆ ಮಾತ್ರ ಏನೂ ಕಡಿಮೆ ಮಾಡದೆ ಎಲ್ಲವನ್ನು ಕೊಡಿಸುತ್ತಾರೆ.

ಕಾಲೇಜು ಮೆಟ್ಟಿಲೇರುವಾಗ ಮಕ್ಕಳ ಇಷ್ಟದ ಕಾಲೇಜಿಗೆ ಸಾಲವನ್ನಾದರೂ ಮಾಡಿ ಸೇರಿಸುತ್ತಾರೆ. ಕೆಲವೊಮ್ಮೆ ಎಲ್ಲೂ ಹಣ ಸಿಗದಿದ್ದಾಗ ತಾಯಿ ತನ್ನ ಮೈಮೇಲಿನ ವಡವೆಗಳನ್ನು ಮಾರಲು ಹಿಂದೆ ಮುಂದೆ ನೋಡುವುದಿಲ್ಲ. ಹೀಗೆ ಜೀವನದ ಪ್ರತಿ ಹಂತದಲ್ಲೂ ಮಕ್ಕಳ ಬಗ್ಗೆ ಯೋಚಿಸುತ್ತಾ ಅವರ ಏಳಿಗೆಗಾಗಿ ಅವರ ಒಳಿತಿಗಾಗಿ ಶ್ರಮಿಸುತ್ತಾ ಬರುತ್ತಾರೆ. ಕಷ್ಟದಲ್ಲೇ ನಲಿವು ಕಾಣುತ್ತಾರೆ. ಮಕ್ಕಳ ಸಂತೋಷದಲ್ಲೇ ತೃಪ್ತಿ ಪಡುತ್ತಾರೆ.

ಕಷ್ಟಪಟ್ಟು ಹೊಟ್ಟೆಕಟ್ಟಿ ಓದಿಸಿ ದೊಡ್ಡವರನ್ನಾಗಿ ಮಾಡಿ, ನೋವ ಮರೆತು ನಲಿವನು ಅರಸಿ, ಮಾಡಿದ ಶ್ರಮ ಸಾರ್ಥಕವಾಗಿದೆ, ಮಕ್ಕಳಿಗೆ ಕೆಲಸ ಸಿಕ್ಕಿದೆ, ಕಾಲಕ್ಕೆ ಸರಿಯಾಗಿ ಮದುವೆ ಮಾಡಿ ಮೊಮ್ಮಕ್ಕಳ ಆಗಮನದ ಕನಸ ಕಾಣುತ್ತಾ ಮೊಮ್ಮಕ್ಕಳಿಗೆ ತಮ್ಮಿಂದ ಕೊಡಬಹುದಾದ ಖುಷಿ, ಮೊಮ್ಮಕ್ಕಳ್ಳೊ೦ದಿಗಿನ  ಆಟ ಪಾಠಗಳ ಬಗ್ಗೆ ಎಣಿಸುತ್ತಾ, ಗುಣಿಸುತ್ತಾ ಕಾಲ ಕಳೆಯಬೇಕಾದರೆ ತಮ್ಮ ಮುದ್ದಿನ ಮಕ್ಕಳಿಂದ ಸೊಸೆಯರಿಂದ ಸಿಡಿಲಿನಂತ ಸುದ್ದಿಯನ್ನು ಕೇಳುತ್ತಾರೆ. ಅದು ಅವರನ್ನು ವೃದ್ದಾಶ್ರಮಕ್ಕೆ ಕಳುಹಿಸುವ ವಿಚಾರ. ಅಪ್ಪ ಅಮ್ಮಂದಿರನ್ನು ಮಕ್ಕಳಿಂದ ದೂರವಿರಿಸುವ ವಿಚಾರ.ಇಷ್ಟು ದಿನ ಕಣ್ಣ ಮುಂದೆ ಮಕ್ಕಳ ಸುಖ ಸಂತೋಷ, ದುಃಖ ದುಮ್ಮಾನಗಳನ್ನು ಕಣ್ಣಲ್ಲಿ ಕಣ್ಣಿಟ್ಟು, ಮಕ್ಕಳ ಪ್ರತಿ ಹೆಜ್ಜೆಯಲ್ಲಿಯೂ ನಿಲುವಾಗಿ ನಿಂತ ಪೋಷಕರಿಗೆ ಇದು ನುಂಗಲಾರದ ತುತ್ತೇ ಸರಿ. ಆದರೂ ಎಷ್ಟೇ ಕಷ್ಟವೆನಿಸಿದರೂ, ಎಷ್ಟೇ ನೋವೆನಿಸಿದರೂ ಮರು ಮಾತಾಡದೆ ಮರು ಪ್ರಶ್ನಿಸದೆ ಮಕ್ಕಳ ಸಂತೋಷಕ್ಕಾಗಿ ಇಳಿವಯಸ್ಸಿನಲ್ಲಿ ಅಪ್ಪ ಅಮ್ಮ ವೃದ್ದಾಶ್ರಮ ಸೇರುತ್ತಾರೆ.

ಮೊದಮೊದಲು ವಾರಕ್ಕೊಮ್ಮೆ ಭೇಟಿ ಮಾಡುವ ಮಕ್ಕಳು, ಆಮೇಲೆ ತಿಂಗಳಿಗೊಮ್ಮೆ ಭೇಟಿ ಮಾಡುತ್ತಾರೆ. ಕಾಲ ಕಳೆದಂತೆ ತಮಗೆ ಅಪ್ಪ ಅಮ್ಮ ಎಂಬ ಎರಡು ಜೀವಗಳಿವೆ ಎಂಬುದನ್ನು ಎಷ್ಟೋ ಜನ ಮರೆತೇ ಬಿಡುತ್ತಾರೆ. ಕಣ್ಣ ಮುಂದಿದ್ದರೂ, ಕಣ್ಣ ಮರೆಯಲ್ಲಿದ್ದರೂ ಸದಾ ಮಕ್ಕಳು ಮೊಮ್ಮಕ್ಕಳ ಬಗ್ಗೆ ಯೋಚಿಸುತ್ತಾ, ಮಕ್ಕಳ ಬರುವಿಕೆಗಾಗಿ ಕಾಯುತ್ತಾ, ಕೊರಗುತ್ತಾ ಇಳಿಜೀವಗಳು ಜೀವನ ದೂಡುತ್ತಾರೆ.

ಇಷ್ಟೆಲ್ಲಾ ಆಗುತ್ತಿರುವುದು ಪಾಶ್ಚ್ಯಾತ್ಯ ಸಂಸ್ಕೃತಿಯ ಕರಿ ನೆರಳಿನಿಂದಾಗಿ. ಪಕ್ಕಕ್ಕೆ ಹೆಂಡತಿ ಬಂದೊಡನೆ ಅಪ್ಪ ಅಮ್ಮಂದಿರ ನೆರಳು ಬೇಡವೆನಿಸಿ, ಅವರು ಮಾಡಿದ ತ್ಯಾಗ ಶ್ರಮಗಳ ಗಾಳಿಗೆ ತೂರಿ, ಹೆಂಡತಿಯ ಕೈಗೆ ಬುದ್ದಿ ಕೊಟ್ಟು ಹೆಂಡತಿ ಹಾಕಿದ ತಾಳಕ್ಕೆ ಕುಣಿಯುತ್ತಾ, ತಾನು , ತನ್ನ ಹೆಂಡತಿ, ತನ್ನ ಮಕ್ಕಳ ಬಗ್ಗೆ ಮಾತ್ರ ಯೋಚಿಸುವ ಕೆಟ್ಟ ಗುಣದಿಂದಾಗಿ.

ಇಂದು ಪಾಶ್ಚ್ಯಾತ್ಯ ಸಂಸ್ಕೃತಿಯ ಹಾವಳಿಯಿಂದಾಗಿ ಜನರು ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಲೆಕ್ಕಿಸದೆ ಸಂಬಂದಗಳ ಬೆಲೆ ಮತ್ತು ಸಂಸ್ಕಾರಗಳನ್ನು ಮರೆಯುತ್ತಿದ್ದಾರೆ. ಎಲ್ಲಾ ಬೆಳವಣಿಗೆಗಳಿಂದ ನಾವು ನಮ್ಮವರು ಎಂಬ ಭಾವನೆಯನ್ನು ಮರೆಯುತ್ತಿದ್ದಾರೆ. ಎಲ್ಲವುದಕ್ಕಿಂತ ಹೆಚ್ಚಾಗಿ ಹಿರಿ ಜೀವಗಳ ಮೇಲಿನ ಪ್ರೀತಿ ಗೌರವ ಹೊರಟು ಹೋಗಿ ಅವರ ಸೇವೆ ನಾವೇಕೆ ಮಾಡಬೇಕು ಎಂದೆಣಿಸಿ ವೃದ್ದಾಶ್ರಮಗಳತ್ತ ಕಣ್ಣು ಹಾಯಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ  ವೃದ್ದಾಶ್ರಮಗಳು  ಬೀದಿಗೊಂದು ತಲೆ ಎತ್ತುತ್ತಿವೆ.

ವೃದ್ದಾಶ್ರಮಕ್ಕೆ ಬಿಟ್ಟರೂ ವಾಸಿ ಕೆಲವು ಪುಣ್ಯಾತ್ಮರು ಜನ್ಮ ಕೊಟ್ಟ ಜೀವಗಳನ್ನು ನಿನ್ನೆ ಮೊನ್ನೆ ಬಂದ ಹೆಂಡತಿಯ ಮಾತು ಕೇಳಿ ಇತ್ತ ಮನೆಯಲ್ಲಿಯೂ ಇರಿಸಿಕೊಳ್ಳದೆ ಅತ್ತ ಆಶ್ರಮಕ್ಕೂ ಬಿಡದೆ ಮನೆಯಿಂದ ಹೊರದೂಡುತ್ತಾರೆ. ಕೈಯಲ್ಲಿ  ಶಕ್ತಿ ಇರುವಾಗ ಮಕ್ಕಳಿಗಾಗಿ ದುಡಿದ ಜೀವಗಳು ತಮಗಾಗಿ ಏನೂ ಮಾಡಿಕೊಳ್ಳದ ಪರಿಣಾಮ ಅಕ್ಷರಸಹ  ಬೀದಿಗೆ ಬೀಳುತ್ತಾರೆ. ಹೊಟ್ಟೆ ಪಾಡಿಗಾಗಿ ಭಿಕ್ಷೆ ಬೇಡುತ್ತಾರೆ
ಹೀಗೆ ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಿದ ಮಕ್ಕಳಿಗೆ ಹಿಡಿ ಶಾಪ ಕೂಡ ಹಾಕದೆ ದೇವರು ಕೊಟ್ಟ  ಜೀವವನ್ನು ಅವನೇ ತೆಗೆದುಕೊಂಡು ಹೋಗಲೆಂದು ಜೀವನ ಸಾಗಿಸುತ್ತಾರೆ.

ಮುದ್ದು ಮಾಡಿ, ನೆಲಕ್ಕೆ ಬಿಟ್ಟರೆ ಮಾಸಿಹೋಗುತ್ತಾರೆ  ಎಂದು ಅಂಗೈಯಲ್ಲಿಟ್ಟು  ಲಾಲಿಸಿ ಪಾಲಿಸಿದ ಪೋಷಕರು ಮುಪ್ಪಾದ ಮೇಲೇಕೆ ಬೇಡವೆನಿಸುತ್ತಾರೆ...? ಪ್ರತಿ ಹೆಜ್ಜೆಯಲ್ಲೂ ಊರುಗೋಲಂತಿದ್ದವರನ್ನು ನಡೆಯಲು ಬಂದಾಕ್ಷಣ ಊರುಗೋಲನ್ನು ಬಿಸಾಡುವಂತೆ ಬೀದಿಗೆ ತಳ್ಳುವರೇಕೆ ...? ಎಷ್ಟಿದ್ದರೇನು  ಏನಿದ್ದರೇನು  ತಂದೆ ತಾಯಿಯ ಋಣವ ತೀರಿಸಲಾಗುವುದೇ...? ಅವರು ಮಾಡಿದ ತ್ಯಾಗಕ್ಕೆ ತೋರಿದ ಪ್ರೀತಿಗೆ ಬೆಲೆ ಕಟ್ಟಲಾಗುವುದೇ....?

ಕಾಲ ಚಕ್ರ ಎಂದೂ ನಿಲ್ಲುವುದಿಲ್ಲ ಸದಾ ಸುತ್ತುತ್ತಲೇ ಇರುತ್ತದೆ. "ಮಾಡಿದ್ದುಣ್ಣೋ  ಮಹರಾಯ" ಎಂಬ ಗಾದೆ ಮಾತಿನಂತೆ ನಾವುಗಳು ನಮ್ಮ ಅಪ್ಪ ಅಮ್ಮಂದಿರಿಗೆ ಮಾಡಿದ ರೀತಿಯನ್ನು ನೋಡಿ ಬೆಳೆದ ನಮ್ಮ ಮಕ್ಕಳು ನಮಗೂ ಅದೇ ರೀತಿ ಮಾಡುತ್ತಾರೆ ನಾವು ನಮ್ಮ ಅಪ್ಪ ಅಮ್ಮಂದಿರನ್ನು ಸೇರಿಸಿದ ವೃದ್ದಾಶ್ರಮದಲ್ಲೇ ನಮಗೂ ಒಂದು ಸೀಟನ್ನು ಕಾದಿರಿಸುತ್ತಾರೆ. ನಾವು ತಳ್ಳಿದ ಬೀದಿಯಲ್ಲಿ ನಮಗೂ ಒಂದು ಪುಟ್ ಪಾತಿನ ಮೂಲೆಯನ್ನು ಕಾದಿರಿಸುತ್ತಾರೆ.

ಇಷ್ಟೆಲ್ಲಾ ಅನಾಹುತಗಳಿಗೆ ಎಡೆ ಮಾಡಿಕೊಡದೆ ಎಷ್ಟೇ ತಿಳಿದಿದ್ದರೂ, ಏನೆಲ್ಲಾ ಸಾಧಿಸಿದ್ದರೂ, ಜಗತ್ತನ್ನೆಲ್ಲಾ ಸುತ್ತಿದ್ದರೂ  ಪಾಶ್ಚ್ಯಾತ್ಯ ಸಂಸ್ಕೃತಿಗೆ ಮಾರು ಹೋಗದೆ, ಕಲ್ಲು ದೇವರ ಪೂಜಿಸದೆ, ನಮ್ಮ ತಂದೆ ತಾಯಿಯರ ಪೂಜಿಸಿ, ನಮ್ಮ ಸಂಸ್ಕೃತಿ ಸಂಪ್ರದಾಯಗಳ ಪಾಲಿಸಿ, ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಸಂಸ್ಕಾರ ಕೊಟ್ಟು ಜೀವನದ ಮೌಲ್ಯಗಳನ್ನು ಕಟ್ಟಿ ಕೊಟ್ಟು ಸ್ವಾಸ್ಥ್ಯ ಸಮಾಜವ ನಿರ್ಮಿಸಲು ಮುಂದಾಗೋಣ.

                                         ಇಂತಿ,
                                                 ಕವಿತಾಗೌಡ