Saturday 27 June 2020

28/6/2020ರ ತುಮಕೂರು ವಾರ್ತೆ ಪತ್ರಿಕೆಯಲ್ಲಿ ನನ್ನಲೇಖನ.



ಓಡುತ್ತಿರುವ ಜಗದಲ್ಲಿ ಪ್ರತಿದಿನ ಲಕ್ಷಾಂತರ ಜನ ಹುಟ್ಟುತ್ತಾರೆ ಲಕ್ಷಾಂತರ ಜನಗಳು ಸಾಯುತ್ತಾರೆ. ಹೀಗೆ ದಿನಾಲು ಹುಟ್ಟು ಸಾವುಗಳ ಚಕ್ರ ತಿರುಗುತ್ತಿರುವಾಗ ಇರುವ ಎಲ್ಲಾ ಜನರು ಸತ್ತಂತಹ ಎಲ್ಲರನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ ಏನನ್ನಾದರೂ ಸಾಧಿಸಿದವರನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುತ್ತಾರೆ.
ನಮ್ಮದೇ ವಂಶದಲ್ಲಿ ನಮಗೆ ಈಗ ಅಬ್ಬಬ್ಬಾ ಅಂದರೆ ನಮ್ಮ ತಾತ ಮುತ್ತಾತ ಅವರ ಬಗ್ಗೆ ಮಾತ್ರ ತಿಳಿದಿರುತ್ತದೆ,  ಮುತ್ತಾತನವರ ಹಿಂದಿನ ವಂಶಸ್ಥರ ಬಗ್ಗೆ ಅಂದರೆ ಮುತ್ತಾತನವರ ತಂದೆ ತಾಯಿ, ಮುತ್ತಾತನವರ ಅಜ್ಜ ಅಜ್ಜಿಯ ಬಗ್ಗೆ ಸಾಮಾನ್ಯವಾಗಿ ತಿಳಿದಿರುವುದಿಲ್ಲ ಆದರೆ ಹಿಂದಿನ ವಂಶಸ್ಥರೇನಾದರು ಉನ್ನತ ಮಟ್ಟದ ಸಾಧನೆ ಮಾಡಿದ್ದಲ್ಲಿ ನಮ್ಮ ವಂಶವನ್ನು ಅವರ ಹೆಸರಿಂದಲೋ ಅವರ ಅವರ ಸಾಧನೆಯಿಂದಲೋ ಎಲ್ಲರೂ ಗುರುತಿಸುತ್ತಾರೆ ಆಗ ಅವರ ಬಗ್ಗೆ ಎಲ್ಲರು ನೆನಪಿಸಿಕೊಳ್ಳುತ್ತಾರೆ. ನಮ್ಮದೇ ಮನೆಗಳಲ್ಲಿ ಈಗಿರುವಾಗ ಇನ್ನು ಈ ಜಗದಲ್ಲಿ ಏನನ್ನು ಸಾಧಿಸದವರನ್ನು ನೆನೆಯಲು ಹೇಗೆ ಸಾಧ್ಯ ?
ಏನೂ ಮಾಡದೆ ಬದುಕಿದ್ದು ಸತ್ತಂತಿರುವುದಕ್ಕೂ, ನಿಜವಾಗಲೂ ಸತ್ತು ಹೋಗುವುದಕ್ಕೂ ಏನು ವ್ಯತ್ಯಾಸವಿಲ್ಲ. ಸತ್ತ ಮೇಲೂ ನಾವು ಬದುಕಿರಬೇಕಾದರೆ ಏನನ್ನಾದರೂ ಸಾಧಿಸಬೇಕು ಆದ್ದರಿಂದ ಸಾಧಿಸದೆ ಸಾಯಲೇಬಾರದು.    
ಸಾಧನೆ ಅನ್ನುವುದು ಯಾರ ಆಸ್ತಿಯೂ ಅಲ್ಲ ಮತ್ತು ಅಷ್ಟು ಸುಲಭಕ್ಕೆ ದಕ್ಕುವಂತದ್ದಲ್ಲ ,ಆದರೆ ಅದೇನು ಅಸಾಧ್ಯವಾದುದಲ್ಲ. ಸರಿಯಾದ ಗುರಿ ಇಟ್ಟುಕೊಂಡು, ಪ್ರತಿನಿತ್ಯ ಆ ಗುರಿ ತಲುಪುವುದಕ್ಕೆ ಮಾಡಬೇಕಾದ ಸರ್ವ ಪ್ರಯತ್ನಗಳನ್ನು ಮಾಡಿದಾಗ ಖಂಡಿತ ಯಶಸ್ಸು ದೊರೆಯುತ್ತದೆ.  ಒಂದೇ ಪ್ರಯತ್ನಕ್ಕೆ ಯಾವತ್ತೂ ನಾವು ಗುರಿ ಮುಟ್ಟುವುದಿಲ್ಲ.
ಪ್ರತಿಯೊಬ್ಬರೂ ತಾವು ಮಾಡುವ ಮೊದಲ ಪ್ರಯತ್ನದಲ್ಲಿ ಸೋತಿರುತ್ತಾರೆ ಆದರೆ ಅನುಭವವನ್ನ ಪಡೆದುಕೊಂಡಿರುತ್ತಾರೆ ಅನುಭವ ಅನ್ನುವುದು ಎಲ್ಲವುದಕ್ಕಿಂತಲೂ ಬಹುಮುಖ್ಯ ಆ ಅನುಭವವೇ ನಮ್ಮದಾದ ಮೇಲೆ ಮುಂದಿನ ಪ್ರಯತ್ನಗಳಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ.
ನಾವು ನಮ್ಮ ಪ್ರಯತ್ನ ಮಾಡುವಾಗ ಸುಮಾರು ಬಾರಿ ಸೋಲಬಹುದು, ನಮ್ಮ ಸೋಲನ್ನು ನೋಡಿ ಅಕ್ಕ ಪಕ್ಕದವರು ಇವನೊಬ್ಬ ಹುಚ್ಚ ಬುದ್ದಿ ಇಲ್ಲದೆ ಸುಮ್ಮನೆ ಸಮಯ ಮತ್ತೆ ಶಕ್ತಿಯನ್ನ ವ್ಯರ್ಥಮಾಡುತ್ತಿದ್ದಾನೆ ಎಂದು ಆಡಿಕೊಳ್ಳಬಹುದು ಸಾಕಷ್ಟು ಭಾರಿ ನಮ್ಮನ್ನು ಅವಮಾನಿಸಲುಬಹುದು, ಅವಮಾನವಾದಾಗ ಆ ಕ್ಷಣಕ್ಕೆ  ನಮ್ಮ ಆತ್ಮಸಾಕ್ಷಿಗೆ ನೋವಾಗುತ್ತದೆ ನೋವಾದಾಗ ನಮ್ಮ ಮೇಲೆ ನಾವೇ ಅನುಮಾನಪಡಬಾರದು. ತಾಳ್ಮೆಯಿಂದ ನಮ್ಮ ಪ್ರಯತ್ನವನ್ನು ನಾವು ಮುಂದುವರೆಸಬೇಕು.
ಜೀವನದಲ್ಲಿ ಒಮ್ಮೆಯಾದರೂ ಅವಮಾನ ಆಗಲೇಬೇಕು ಅವಮಾನಗಳೇ ನಮ್ಮ ಸಾಮರ್ಥ್ಯವನ್ನು ನಮಗೆ ಪರಿಚಯಿಸುವುದು ಮತ್ತು ಬಿದ್ದ ಜಾಗದಲ್ಲಿ ಎದ್ದು ನಿಲ್ಲುವುದಕ್ಕೆ ಸ್ಪೂರ್ತಿ ತುಂಬುವುದು.
ನಮ ಜೀವನ ಬೇರೆಯವರು ಆಡಿಕೊಂಡು ನಗುವಷ್ಟು ಮಟ್ಟಕ್ಕೆ ಬಂದಿತು ಎಂದು ಕೊರಗಿ ಜಿಗುಪ್ಸೆ ಪಡಬಾರದು ಸಾಧನೆಗಿಂತ ದೊಡ್ಡ ಸೇಡಿಲ್ಲ ಅವಮಾನಿಸಿದವರ ಮಧ್ಯೆಯೇ ಬೆಳೆದು ನಿಂತು ಸೇಡು ತೀರಿಸಿಕೊಳ್ಳಬೇಕು. ಬೆಳೆದೆವೆಂದರೆ ಅಡಕೆ ಮರದಹಾಗೆ ಅಲ್ಲ, ಆಲದ ಮರದಹಾಗೆ ಬೆಳೆಯಬೇಕು ಪೊದೆಯಾಗಿ ಬೆಳೆಯಬೇಕು ಹಿಡಿಹಿಡಿಯಾಗಿ ಕಾಣಬೇಕು.  
ನಮ್ಮ ಸತತ ಸೋಲುಗಳನ್ನು ನೋಡಿ ನಮ್ಮನ್ನ ನಂಬಿದವರು ನಮ್ಮ ಸ್ನೇಹಿತರು ನಮ್ಮನ್ನು ಬಿಟ್ಟು ಹೋಗಬಹುದು. ನೀವು ಒಬ್ಬಂಟಿ ಅನಿಸಬಹುದು ಒಂಟಿತನ ಕಾಡಬಹುದು, ಮನುಷ್ಯ ಒಂಟಿಯಾಗಿದ್ದಾಗ ಮನಸ್ಸು ಮಸಣವಾದಂತಾಗುತ್ತದೆ ಬೇಡದ ಯೋಚನೆಗಳು ಶುರುವಾಗುತ್ತವೆ ಉತ್ತರ ದೊರಕದ ನೂರಾರು ಪ್ರಶ್ನೆಗಳು ನಿಮ್ಮಲ್ಲಿ ಗಲಭೆ ಎಬ್ಬಿಸುತ್ತವೆ ಇದೆಕ್ಕೆಲ್ಲ ಆಸ್ಪದ ಕೊಡದೆ ನಮ್ಮೆಲ್ಲಾ ಗಮನವನ್ನು ಗುರಿಕಡೆಗೆ ತಿರುಗಿಸಿ ಒಂಟಿತನವನ್ನು  ಏಕಾಂತವನ್ನಾಗಿಸಿಕೊಂಡು ಪರಿಶುದ್ಧ ಏಕಾಂತದಲ್ಲಿ ಗುರಿಕಡೆಗೆ ಸಾಗುವ ಒಳ್ಳೆಯ ದಾರಿಗಳನ್ನು ಹುಡುಕಬೇಕು. ಹಾಗೆ ಹುಡುಕಿದಾಗ ಯಶಸ್ಸನ್ನು ಬೆನ್ನಟ್ಟುವ ಮಾರ್ಗಗಳು ಖಂಡಿತ ಸಿಕ್ಕೇ ಸಿಗುತ್ತವೆ.
ನಾವು ಎಷ್ಟೇ ಬಂಡರಾದರು ಮೂರ್ಖ ಜನಗಳ ಮಾತಿಗೆ ಕೆಲವೊಮ್ಮೆ ನಮ್ಮ ಮನಸ್ಸು ಕುಗ್ಗುತ್ತದೆ ಇಂತಹ ಸಂದರ್ಭಗಳಲ್ಲಿ ಗುರಿಯೆಡೆಗಿನ ಹೆಜ್ಜೆಯನ್ನ ಯಾವುದೇ ಕಾರಣಕ್ಕೂ ಹಿಂದೆ ತೆಗೆಯದೆ, ನಿರಾಶಾವಾದಿಗಳನ್ನ ಹತ್ತಿರ ಬಿಟ್ಟುಕೊಳ್ಳದೆ  ನಮ್ಮ ಕೆಲಸವನ್ನು  ನಾವು ಮಾಡುತ್ತಾ ಬಂದರೆ ದಿನೇ ದಿನೇ ಯಶಸ್ಸಿನೆಡೆಗೆ ದಾಪುಗಾಲು ಹಾಕುತ್ತೇವೆ . 
ಈ ಬದುಕು ನಮ್ಮ ಮೇಲೆ ಎಷ್ಟೇ ಘರ್ಜಿಸಿ ಸೋಲಿನ ತೆಕ್ಕೆಗೆ ತಳ್ಳಿದರೂ ಕಡೆಗೆ ಕೈ ಹಿಡಿದು ಮೇಲೆತ್ತುತ್ತದೆ ಆದ್ದರಿಂದ ಗುರಿಯಿಂದ ವಿಚಲಿತರಾಗದೆ ಸರ್ವ ಪ್ರಯತ್ನಗಳನ್ನು ಮಾಡುತ್ತಾ ಬಂದರೆ ಗೆಲುವು ನಮ್ಮದಾಗುತ್ತದೆ.  ಸೋಲು, ಹತಾಶೆ,ನೋವು, ಜಿಗುಪ್ಸೆ ಎದುರಾದಾಗಲೆಲ್ಲಾ ಹೀಗೊಂದು ನಿರ್ಣಯ ಮಾಡಿ,  ಸೋಲನ್ನು ಕೆಣ್ಣೆದುರಿಗೆ ಕಾಣದಂತೆ ಓಡಿಸಿ. ಇದೇ ಗೆಲುವಿನ ಸೂತ್ರ ಅಷ್ಟೇ ಅಲ್ಲ, ಸೋಲನ್ನು ಹೊಡೆದೋಡಿಸುವ ಸುಲಭ ಮಾರ್ಗ  

                                                ಇಂತಿ,
                                                                         ಕವಿತಾ ಗೋಪಿಕುಂಟೆ